kajavivi@gmail.com   |   0836-2255180

ಪೊಟೊ ಗ್ಯಾಲರಿ

ಪಟ್ಟಾಂಗ

ಆನ್ಲೈನ್ ಪ್ರವೇಶ

ವೀಡಿಯೊ ಗ್ಯಾಲರಿ

ದೃಷ್ಟಿಕೋನಗಳು ಹಾಗೂ ಕಾರ್ಯಯೋಜನೆಗಳು

ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸಲೆಂಬ ವಿಶಿಷ್ಟ ಗುರಿಯನ್ನು ಸಾಧಿಸಲಿಕ್ಕಾಗಿಯೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆರಂಭಗೊಂಡಿದೆ.

ಕರ್ನಾಟಕ ಘನ ಸರ್ಕಾರವು ಸಮಸ್ತ ಕನ್ನಡ ಜನರ ಆಶೋತ್ತರಗಳಿಗೆ ಸ್ಫಂದಿಸಲೆಂದೇ ಕರ್ನಾಟಕ ಜನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಲೆಂದು ಹಾಗೂ ಕನ್ನಡ ಜಾನಪದ ವಿಜ್ಞಾನದ ಬೆಳವಣಿಗೆಗೆಂದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಪಶ್ಚಿಮಕ್ಕೆ ಸಹ್ಯಾದ್ರಿಯ ಪರ್ವತದ ಕೊನೆಯ ಅಂಚಿನ ಹಾಗೂ ಪೂರ್ವಕ್ಕೆ ಬಯಲುಸೀಮೆಯ ವಿಶಾಲ ಮೈದಾನ ಭೂಮಿಯಲ್ಲಿಯ ನಡುವಿನ ಸುಂದರ ಭೌಗೋಳಿಕ ಪರಿಸರದ ನಡುವಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಈ ವಿಶ್ವವಿದ್ಯಾಲಯವು ತಲೆಯೆತ್ತಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಅರ್ಥಪೂರ್ಣ ನೆರವಿನಿಂದ ಕರ್ನಾಟಕ ಸಂಸ್ಕೃತಿಯಲ್ಲಿಯೇ ಬಹು ವೈವಿಧ್ಯವನ್ನು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿರುವ ಕರ್ನಾಟಕದ ಜನಪದ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಪರಿಚಯಿಸುವ ಹಾಗೂ ಅಧ್ಯಯನದ ಮೂಲಕ ಅದರ ಅಂತಃಸತ್ವವನ್ನು ತಿಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದೆ. ಪ್ರಸಕ್ತ ವರ್ಷದಲ್ಲಿಯೇ ಈ ಪ್ರಕಾರವಾಗಿ ಜನಪದ ಸಂಸ್ಕೃತಿಯನ್ನು ಕುರಿತು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಲೆಂದೇ ಇದರಲ್ಲಿ ಜಾನಪದ ಸರ್ವೇಕ್ಷಣೆ ಮತ್ತು ದಾಖಲಾತಿ ಕಾರ್ಯ ನಡೆಸಲು ಅವಕಾಶವಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸಲು ಸಾಧ್ಯವಾಗಬಲ್ಲಂತಹ ಅದಕ್ಕೆ ಅವಕಾಶ ಒದಗಿಸುವ ಮೂಲಕ ಉನ್ನತ ಶಿಕ್ಷಣ ಕೇತ್ರದಲ್ಲಿಯೇ ಹೊಸ ಮಜಲನ್ನು ಸೃಷ್ಟಿಸಿದ ಕೀರ್ತಿಗೆ ಕರ್ನಾಟಕವು ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವೆಂಬುದು ಕೇವಲ ಉನ್ನತ ಶಿಕ್ಷಣ ನೀಡುವ ಸಂಸ್ಥೆಯಾಗದೆ ಜನಪದರ ಬದುಕಿನ ಎಲ್ಲಾ ಮಗ್ಗುಲುಗಳಲ್ಲಿಯೂ ಇರಬಹುದಾದ ಬದುಕು-ಬವಣೆ, ಸವಾಲು-ಸೋಲು-ಗೆಲುವು, ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬದಲಾವಣೆಯ ತೀವ್ರತೆ, ಜಾಗತೀಕರಣದ ಪರಿಣಾಮ - ಹೀಗೆ ಹಲವು ಬಗೆಯ ಏರಿಳಿತಗಳ ಕುರಿತು ನಿರಂತರ ಅವಲೋಕನ, ಸಂಶೋಧನೆ ನಡೆಸುವ ಉನ್ನತ ಸ್ತರದ ಸಂಶೋಧನಾಲಯವೇ ಆಗಿದೆ. ಅಂತೆಯೇ ಅಭಿವೃದ್ಧಿ ಮಾರ್ಗಸೂಚಿ ಹಾಗೂ ಸಮಸ್ಯೆಗಳಿಗೆ ಪರಿಹಾರ, ಮಾರ್ಗೋಪಾಯಗಳನ್ನು ಸಂದರ್ಭಕ್ಕೆ ಪೂರಕವಾಗಿ ಒದಗಿಸುವ ಮೂಲಕ ಸಾಮಾಜಿಕವಾಗಿ ವಿಶಿಷ್ಟವಾದ ಬಾಧ್ಯತೆಯನ್ನು ನಿರಂತರವಾಗಿ ನಿರ್ವಹಿಸಬೇಕಾದ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯಯೋಜನೆ ರೂಪಿಸಬೇಕಾದ ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಂಡು ಮುಂದಿನ ಹೆಜ್ಜೆಗಳನ್ನು ಇಡಲಾರಂಭಿಸಿದೆ.